Monday, May 25, 2020

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ!



ಮನದ ಗರ್ಭದೊಳಗೆ,
ಭಾವ ಬೀಜ ಮೊಳೆತು,
ಪದದ ಭ್ರೂಣ ಬಲಿಯುವ
ಮೊದಲೇ ಗರ್ಭಪಾತ..
'ಬಂಜೆ' ಮನಕೆ ಒಂದೂ ಉಳಿಯಲಿಲ್ಲ,
ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ.

ಅಲ್ಲೇ ಮೂಲೆಯಲೆಲ್ಲೋ,
ಕೊಳಲಿನ ನಾದ,ಆಗೊಮ್ಮೆ ಈಗೊಮ್ಮೆ.
ಗೆಜ್ಜೆಯೂ ಅಲ್ಲೇ ಇದೆ..
ಏನೋ ತಡೆ, ಹೆಜ್ಜೆ ಹಾಕಲು ಒಮ್ಮೆ.

ನಾದ ಹೊಮ್ಮುತ್ತಿಲ್ಲ,
ಮೌನವಾಗಿದೆ ವೀಣೆ
ಬೆರಳುಗಳು ಬಂಧಿ,
ಯಾವುದೋ ಬಂಧನದೊಳಗೆ.

ಮನದ ಪರದೆಯ ಮೇಲೆ
ಚಿತ್ತಾರವಿಲ್ಲ.
ಬಣ್ಣ ಮಾಸಿದ ನೂರಾರು ರೇಖೆಗಳು,
ಅವು ಅರ್ಥವಾಗುವುದಲ್ಲ.

ಈಗಿಲ್ಲ,ಮೊದಲಿದ್ದ ಕಲ್ಪನಾವಿಲಾಸ,
ಒಣಗಿತೇಕೋ ಈಗೆಲ್ಲ ಭಾವರಸ?
ಈಗಿಲ್ಲ, ಭಾವನೆಗಳ ವಿದ್ಯುದಾಲಿಂಗನ,
ಪದದೊಡನೆ ಪದಗಳ ಆ ಸಮ್ಮಿಲನ.

ಮೊದಲೆಲ್ಲ  ಗಾಳಿಯೂ
ಪದಗಳ ಹೊತ್ತು ಬರುತ್ತಿತ್ತು,
ಸಮಯದ ಅರಿವಿಲ್ಲದೆ ಸಾಲಾಗುತ್ತಿತ್ತು.
ಎಲ್ಲೋ  ಜಾರಿದೆ  ಆ ಸಮಯ,
ಮತ್ತೆ ಸಿಕ್ಕುತ್ತಿಲ್ಲ.
ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ.
             
              ಜಿತೇಂದ್ರ ಬೇದೂರು.

No comments:

Post a Comment